ಕೋಡಿಂಬಾಡಿ ಅಶೋಕ್ ಕುಮಾರ್ ರೈ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರು ಹಾಗೂ ಪ್ರಸ್ತುತ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. == ವೈಯಕ್ತಿಕ ಜೀವನ == 1970ರಲ್ಲಿ ಕೋಡಿಂಬಾಡಿ ಗ್ರಾಮದ ನಿವೃತ್ತ ಅಧ್ಯಾಪಕ ಪಿಜಿನಡ್ಕಗುತ್ತಿನ ದಿವಂಗತ ಸಂಜೀವ ರೈ ಮತ್ತು ಗಿರಿಜಾ ಎಸ್.‌ ರೈ ಅವರ ಮಗನಾಗಿ ಜನಿಸಿದ ಇವರು, ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ಶಿಕ್ಷಣ, ಮೈಸೂರು ವಿವಿಯಲ್ಲಿ ಪದವಿ ಹಾಗೂ ಬೆಂಗಳೂರು ವಿವಿಯಿಂದ ರಾಜಕೀಯ ಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದಾರೆ. ಸ್ವಂತ ಉದ್ಯಮವನ್ನು ನಡೆಸುತ್ತಿದ್ದಾರೆ. == ರಾಜಕೀಯ ಜೀವನ == ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿದ್ದ ಅಶೋಕ್ ರೈ, ಭಾರತೀಯ ಜನತಾ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದರು. ಪಕ್ಷದಲ್ಲಿ ಜಿಲ್ಲಾ ಸ್ತರದ ಜವಾಬ್ದಾರಿಗಳನ್ನೂ ನಿಭಾಯಿಸಿದ್ದ ಇವರು, ಡಿ. ವಿ. ಸದಾನಂದ ಗೌಡ, ನಳಿನ್ ಕುಮಾರ್ ಕಟೀಲು ಅವರ ಆಪ್ತ ವಲಯದಲ್ಲೂ ಗುರುತಿಸಿಕೊಂಡಿದ್ದರು. 2023ರಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರಸ್ ಅಭ್ಯರ್ಥಿಯಾಗಿಯೂ ಆಯ್ಕೆಯಾದರು. ಈ ಚುನಾವಣೆಯಲ್ಲಿ ಅವರು ಜಯಗಳಿಸಿ, ಮೊದಲ ಬಾರಿಗೆ ಶಾಸಕರಾಗಿ ಚುನಾಯಿತರಾದರು. == ಸಮಾಜ ಸೇವೆ == ಓರ್ವ ಯಶಸ್ವಿ ಉದ್ಯಮಿಯಾಗಿರುವ ಅಶೋಕ್ ಕುಮಾರ್ ರೈ, ಗಳಿಸಿದ ಆದಾಯದಲ್ಲಿ ಒಂದಂಶವನ್ನು ಸಮಾಜಕ್ಕೆ ಅರ್ಪಿಸಲು 2013ರಲ್ಲಿ ರೈ ಎಸ್ಟೇಟ್ಸ್‌ ಎಜುಕೇಶನಲ್‌ ಮತ್ತು ಚಾರಿಟೇಬಲ್‌ ಟ್ರಸ್ಟ್‌ ಅನ್ನು ಸ್ಥಾಪಿಸಿದರು. ಅದರ ಮೂಲಕ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ, ವಿಧವೆಯರಿಗೆ, ನಿರುದ್ಯೋಗಿಗಳಿಗೆ, ಅನಾರೋಗ್ಯ ಪೀಡಿತರಿಗೆ, ಅಶಕ್ತರಿಗೆ ಹೀಗೆ ಸಾವಿರಾರು ಕುಟುಂಬಗಳಿಗೆ ಸವಲತ್ತು ಮತ್ತು ಆರ್ಥಿಕ ನೆರವು ನೀಡಲು ಆರಂಭಿಸಿದರು. ಅಡಕೆ ಬೆಳಗಾರರ ಪರ ಹೋರಾಟ, ಕಂಬಳದ ಉಳಿವಿಗಾಗಿ ಹೋರಾಟ, ಕ್ಷೇತ್ರ ವ್ಯಾಪ್ತಿಯ ವಿವಿಧ ದೇಗುಲಗಳ ಜೀರ್ಣೋದ್ಧಾರ, ಬ್ರಹ್ಮಕಲಶ ಇತ್ಯಾದಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದಾರೆ. == ಉಲ್ಲೇಖಗಳು ==